ಚಿ.ತು. ಸಂಘ ಎಂದಕೂಡಲೇ ನಿಮಗೆಲ್ಲ ನೆನಪಾಗೋದು ಅಧ್ಯಕ್ಷ ಸಿನಿಮಾ.ಅದರಲ್ಲಿ ನಾಯಕ ಶರಣ್ ತನ್ನ ಹಾವ ಭಾವಗಳಿಂದಲೇ ಮೋಡಿ ಮಾಡಿದ್ದರು. ದಶಕರ ನಂತರ ಈಗ ಆ ಚಿತ್ರದ ಸೀಕ್ವೇಲ್ ಆಗಿ ಉಪಾಧ್ಯಕ್ಷ ತೆರೆಗೆ ಬಂದಿದೆ.
ಅಲ್ಲಿ ಚಿತು ಸಂಘದ ಉಪಾಧ್ಯಕ್ಷನಾಗಿದ್ದ ನಾರಾಯಣ (ಚಿಕ್ಕಣ್ಣ) ಸೇರಿದಂತೆ, ಕೆಲವು ಪಾತ್ರಗಳು ಈ ಸಿನಿಮಾದಲ್ಲೂ ಮುಂದುವರಿದಿವೆ. ಆದರೆ ಈ ಚಿತ್ರದಲ್ಲಿ ಉಪಾಧ್ಯಕ್ಷ ನಾರಾಯಣನೇ( ಚಿಕ್ಕಣ್ಣ) ನಾಯಕ. ಶಿವರುದ್ರೇಗೌಡರ (ರವಿಶಂಕರ್) ನಾಲ್ಕನೇ ಮಗಳು ಅಂಜು(ಮಲೈಕಾ ವಸುಪಾಲ್) ಮತ್ತು ಅವರ ಸೋದರಳಿಯ ಮದನ (ಸಾಧು ಕೋಕಿಲ) ಕಥೆಯಲ್ಲಿ ನ್ಯೂ ಎಂಟ್ರಿ. ಚಿತು ಸಂಘದ ಅಧ್ಯಕ್ಷ ಚಂದ್ರಶೇಖರಗೌಡ (ಶರಣ್) ತನ್ನದೇ ಕಥೆಯನ್ನು ಮಗನಿಗೆ ವಿವರಿಸುವುದರೊಂದಿಗೆ ಉಪಾಧ್ಯಕ್ಷನ ರೋಚಕ ಪ್ರೇಮಕಥೆಯನ್ನು ತೆರೆದುಕೊಳ್ಳುತ್ತದೆ, ಹಾಗೇ ಅಧ್ಯಕ್ಷನ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷನ ಕಾರುಬಾರು ಕೂಡ ಪ್ರಾರಂಭವಾಗುತ್ತದೆ, ಇಲ್ಲಿ ಶಿವರುದ್ರೇಗೌಡನ ದರ್ಪಕ್ಕೆ ಸವಾಲು ಹಾಕುವ ಉಪಾಧ್ಯಕ್ಷ , ಗೌಡನ ಮುದ್ದಾದ ಮಗಳು ಅಂಜು(ಮಲೈಕಾ ವಸುಪಾಲ್) ಇನ್ನೂ ಹದಿನೆಂಟು ತುಂಬದ ಚೆಲುವೆ.
ತಂದೆ(ಕರಿಸುಬ್ಬು) ಕುಡಿಯಲು ಮಾಡಿಕೊಂಡ ಸಾಲಕ್ಕೆ ಜೀತ ಮಾಡುವ ನಾರಾಯಣ, ಸಖತ್ ಸಿನಿಮಾ ಹುಚ್ಚು ಹಚ್ಚಿಕೊಂಡಿದ್ದ ಗೌಡನ ಮಗಳು ಅಂಜು ಉಪಾಧ್ಯಕ್ಷ ನಾರಾಯಣನನ್ನು ಮೊದಲ ನೋಟದಲ್ಲೇ ಲವ್ ಮಾಡುತ್ತಾಳೆ, ಆತನಲ್ಲಿ ತನ್ನ ನೆಚ್ಚಿನ ಹೀರೋಗಳನ್ನು ನೋಡುತ್ತಾಳೆ. ಅಂಜು ಉಪಾಧ್ಯಕ್ಷನಿಗಾಗಿ ಮನೆಯನ್ನೇ ಬಿಟ್ಟು ಬರುತ್ತಳೆ. ತನ್ನನ್ನೇ ನಂಬಿಬಂದ ಅಂಜುವನ್ನು ನಾರಾಯಣ ಹೇಗೆ ಕಾಪಾಡಿಕೊಳ್ಳುತ್ತಾನೆ, ಅಲೆಮಾರಿಗಳಂತೆ ಊರೂರು ಸುತ್ತುತ್ತ, ಮುಂದೆ ಅವರ ಕಥೆ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ, ಹೇಗೆ ಸುಖಾಂತ್ಯ ಕಾಣುತ್ತದೆ ಎನ್ನುವುದೇ ಉಪಾಧ್ಯಕ್ಷ ಸಿನಿಮಾದ ಒನ್ಲೈನ್ ಸ್ಟೋರಿ.
ಈ ಸಿನಿಮಾ ಹೈಲೈಟ್ ಆಗುವುದೇ ತನ್ನ ಚಿತ್ರಕಥೆಯ ಮೂಲಕ. ಯಾಕೆಂದರೆ, ಅಧ್ಯಕ್ಷ ಸಿನಿಮಾ ನೋಡಿದವರಿಗೆ, ಅಲ್ಲಿನ ಪಾತ್ರಗಳು ಚಿರಪರಿಚಿತ, ಅದೇ ಪಾತ್ರಗಳನ್ನಿಟ್ಟುಕೊಂಡು, ಮತ್ತೊಂದು ಆಯಾಮದಲ್ಲಿ ಪ್ರೇಮಿಗಳ ಕಥೆಯನ್ನು ಹೇಳುತ್ತಾ ಚಿತ್ರವನ್ನು ತೂಗಿಸಿಕೊಂಡು ಹೋಗಿರುವ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು.
ಅಧ್ಯಕ್ಷ ಸಿನಿಮಾದ ಕಥೆಯನ್ನು ಮುಂದುವರಿಸಿ, ಅದನ್ನು ಚಿಕ್ಕಣ್ಣನಿಗೆ ಮ್ಯಾಚ್ ಆಗುವಂತೆ ಬದಲಾಯಿಸಿರುವುದೇ ಚಿತ್ರದ ಹೈಲೈಟ್. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ೨ ಹಾಡುಗಳು ಇಷ್ಟವಾಗುತ್ತವೆ. ನನಗೆ ನೀನು ನಿನಗೆ ನಾನು ಹಾಡು ಕೇಳಲು, ನೋಡಲು ಹಿತವೆನಿಸುತ್ತದೆ, ಮೊದಲ ಬಾರಿಗೆ ಹೀರೋ ಪಟ್ಟ ಏರಿದ್ದರೂ, ಚಿಕ್ಕಣ್ಣ ಅವರ ಕಾಮಿಡಿ ಟೈಮಿಂಗ್ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಚಿತ್ರದ ಕ್ಲಾಮೆರಾ ವರ್ಕ್ ಕೂಡ ಚೆನ್ನಾಗಿದೆ. ಚಿತ್ರದ ಪಂಚಿಂಗ್ ಡೈಲಾಗ್ ಗಳು ಇಷ್ಟವಾಗುತ್ತವೆ. ಕಥೆಯ ಕೊನೆಯಲ್ಲಿ ಬರುವ ಅಧ್ಯಕ್ಷ ಶರಣ್ ಅವರ ಪಾತ್ರ ಇಡೀ ಕಥೆಗೆ ಹೊಸ ಟ್ವಿಸ್ಟ್ ಕೊಡುತ್ತದೆ,
ಮೊದಲಬಾರಿಗೆ ಹೀರೋ ಆಗಿರುವ ಚಿಕ್ಕಣ್ಣ ತನ್ನ ಕಾಮಿಡಿ ಮೂಲಕವೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಮೊದಲ ಬಾರಿಗೆ ಬೆಳ್ಳಿತೆರೆಗೆ ಬಂದಿರುವ ಕಿರುತೆರೆ ನಟಿ ಮಲೈಕಾ ವಸುಪಾಲ್ ಗಮನ ಸೆಳೆಯುತ್ತಾರೆ. ಶಿವರುದ್ರೇಗೌಡನ ಪಾತ್ರಧಾರಿ ರವಿಶಂಕರ್ ಅವರು ಅಧ್ಯಕ್ಷ ಸಿನಿಮಾದಲ್ಲಿ ಯಾವ ರೀತಿ ಮಿಂಚಿದ್ದರೋ, ಅದೇ ರೀತಿ ಇಲ್ಲಿಯೂ ತನ್ನ ಗತ್ತು, ಗಾಂಭೀರ್ಯದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ, ನಾಯಕಿಯ ಮಾವನಾಗಿ ಸಾಧು ಕೋಕಿಲ ತೆರೆಮೇಲೆ ಇದ್ದಷ್ಟು ನಗಿಸುತ್ತಾರೆ. ಉಳದಂತೆ ನಾಯಕನ ತಂದೆಯಾಗಿ ಕರಿಸುಬ್ಬು, ಪೊಲೀಸ್ ಅಧಿಕಾರಿಯಾಗಿ ಕೀರ್ತಿರಾಜ್ ಅವರ ಪಾತ್ರಗಳಿಗೆ ಹೆಚ್ಚಿನ ಅವಕಾಶವಿದೆ. ಉಪಾಧ್ಯಕ್ಷನ ಸ್ನೇಹಿತನಾಗಿ ನಟ ಧರ್ಮಣ್ಣ ಕಡೂರು ಸಹಜ ಅಭಿನಯ ನೀಡಿದ್ದಾರೆ, ಉಳಿದಂತೆ ಹೋಟೆಲ್ ಮ್ಯಾನೇಜರ್ ಆಗಿ ಶಿವರಾಜ್ ಕೆ.ಆರ್. ಪೇಟೆ ಹೀಗೆ ಬಂದು ಹಾಗೆ ಹೋಗುತ್ತಾರೆ,